Saturday, January 31, 2009

ತುಳು ಅಕ್ಷರಮಾಲೆ







ಇದು ನಮ್ಮ ಮನೆಯಲ್ಲಿರುವ ಗ್ರಂಥಗಳನ್ನು ಅಧ್ಯಯನ ಮಾಡಿ ಕಂಡು ಹಿಡಿದಿರುವ ತುಳು ಅಕ್ಷರಮಾಲೆ.
ಗ್ರಂಥಗಳ ಜೊತೆ ನನ್ನ ಸಹಾಯಕ್ಕೆ ಬಂದವರು ನನ್ನ ಅನ್ನ ವರಪ್ಪಾದೆ ಶಂಭಟ್ಟ ಅವರು.
- ರಾಮಚಂದ್ರ ಭಟ್


































ನಮ್ಮ ಮನೆಯ ತುಳು ಲಿಪಿ ತಾಳೆ ಗರಿ ಗ್ರಂಥ.




ನಮ್ಮ ಮನೆ ವಿಟ್ಲ ಬಳಿಯ ಆಲಂಗಾರು. ಇದು ನಮ್ಮ ಮನೆತನದ ಆದಿ ಮನೆ. ನಮ್ಮ ಹಳೆ ಗ್ರಂಥಗಳು ಇರುವುದು ಇಲ್ಲೇ.

ಮೇಲೆ ಕಾಣುವ ಚಿತ್ರ ಒಂದು ಗ್ರಂಥದ ಪುಟ. ಇದು ಪಂಚಾಯತನ ಪೂಜಾ ಪಧ್ಧತಿಯ ಪುಸ್ತಕ.

ಇಂತಹ ಹಲವಾರು ಗ್ರಂಥಗಳು ಪೆಟ್ಟಿಗೆಯಲ್ಲಿ ಭದ್ರವಾಗಿವೆ. ಆದರೆ ಬಹಳಷ್ಟು ಕಡೆ ಇದನ್ನು ಓದುವವರಿಲ್ಲದೆ ಸುಮ್ಮನೆ ಇಟ್ಟಿದ್ದಾರೆ.

ದಕ್ಷಿಣ ಕನ್ನಡದ ಹಲವಾರು ಮನೆತನದವರು ಇಂತಹ ಪುಸ್ತಕಗಳನ್ನು ಧರ್ಮಸ್ಥಳ ವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಆಸಕ್ತರು ನೋಡಬೇಕಿದ್ದರೆ ಧರ್ಮಸ್ಥಳ ಉತ್ತಮ ಜಾಗ.


೨೦೦ ವರ್ಷಗಳ ಹಿಂದಿನ ಶೈಕ್ಷಣಿಕ ವ್ಯವಸ್ಥೆ

ಮಂಗಳೂರು ಪರಿಸರದಲ್ಲಿ ೧೮೫೭ ರ ಮುಂಚೆ ಇದ್ದ ಶೈಕ್ಷಣಿಕ ವ್ಯವಸ್ಥೆಗೂ ನಂತರದ ಶಾಲಾ ವ್ಯವಸ್ಥೆಗೂ ಬಹಳಷ್ಟು ವ್ಯತ್ಯಾಸಗಳಿವೆ.
ಮುಂಚೆ "ಸಂಚಾರಿ ಶಾಲೆಗಳು " ಪ್ರಚಲಿತವಿದ್ದವು. ಇವುಗಳನ್ನು ನಡೆಸಲು ಸಹಾಯ ಮಾಡುತ್ತಿದ್ದರು ಊರ ಹಿರಿಯರು. ಶಾಲೆಯ ಅಧ್ಯಾಪಕರನ್ನು "ಐಗಳು" ಎಂದು ಕರೆಯುತ್ತಿದ್ದರು. ಈಗಿನಂತೆ ಶಾಲಾ ಕಟ್ಟಡಗಳು ಇರಲಿಲ್ಲ. ಇದು ಉದ್ಯೋಗಕ್ಕಿಂತ ಅಭಿರುಚಿ ಮುಖ್ಯ ವಾಗಿರುವ ಕಾರ್ಯವಾಗಿತ್ತು. ಇದಕ್ಕಾಗಿಯೇ ಊರಿನ ಪೂಜೆ ಪುನಸ್ಕಾರಗಳಲ್ಲಿ ಅವರಿಗೆ ವಿಶೇಷ ಮರ್ಯಾದೆ ಇತ್ತು.
ಈ ಶಾಲೆಗಲ್ಲಿ ಅಧಿಕೃತ ಪಾಠ ಪಟ್ಟಿ ಇರಲಿಲ್ಲ. ಆದರೂ ೪ ರಿಂದ ೫ ವರ್ಷಗಳಷ್ಟುಕಲಿಕೆ ಇತ್ತು. ಸರಿಯಾಗಿ ಓದಲು ಬರೆಯಲು ಆಗುವಷ್ಟು ಕಲಿಸುತಿದ್ದರು. ಒಂದು ತಂಡದ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿದ ನಂತರ ಇನ್ನೊಂದು ಊರಲ್ಲಿ ಶಾಲೆ ತೆರೆಯುತ್ತಿದ್ದರು.
ಅದೇ ಊರಲ್ಲಿ ಮುಂದುವರಿಸಲು ಅಸ್ಟೊಂದು ವಿದ್ಯಾರ್ಥಿಗಳು ಇರಲಿಲ್ಲ. ಕೆಲಯೊಂದು ಕಡೆ ಮಾತ್ರ ಇಂಥ ಶಾಲೆಗಳು ಶಾಶ್ವಥವಾಗಿದ್ದವು. ಉದಾಹರಣೆಗೆ ವಿಟ್ಲ ಅರಮನೆ.
ವಿತ್ಳದಂಥ ರಾಜ್ಯಗಳು ಬಹಳ ಚಿಕ್ಕರಾಜ್ಯ ಗಳಾದುದರಿಂದ ಮೈಸೂರಿನಂತೆ ವ್ಯವಸ್ಥಿತ ಶಿಕ್ಷಣ ಸಾಧ್ಯವಾಗಿರಲಿಲ್ಲ.

ಇಂಥ ಶಾಲೆಗಳಲ್ಲಿ ಕನ್ನಡ ಹಾಗೂ ತುಳು ಲಿಪಿಗಳನ್ನು ಕಲಿಸುತ್ತಿದ್ದರು. ಆ ದಿನಗಳಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ ಮೇಲು ವರ್ಗದವರಿದ್ದರಿಂದ ಹೆಚ್ಚಿನ ತುಳು ಸಾಹಿತ್ಯಗಳೆಲ್ಲ ಪೂಜೆಗಳಿಗೆ ಸಂಬಂಧಿಸಿದವಾಗಿವೆ. ಈ ಶಿಕ್ಷಣದ ನಂತರ ಆಸಕ್ತಿ ಇದ್ದವರು ತಂಜಾವೂರು ಮುಂತಾದ ಕಡೆ ಹೋಗಬೇಕಿತ್ತು. ಅಲ್ಲಿ ಸಂಸ್ಕ್ರತ ಕಲಿವುವ ಅವಕಾಶ ಇತ್ತು. ಹಾಗೆ ಉಡುಪಿ ಯಲ್ಲಿ ಕೂಡ ವಿಧ್ಯಾಭ್ಯಾಸ ಮುಂದುವರಿಸ ಬಹುದಾಗಿತ್ತು.
ಈ ಕಾರಣದಿಂದಾಗಿ ಹೆಚ್ಚಿನ ಬರಹ ಕನ್ನಡ ಹಾಗೂ ತುಳು ಲಿಪಿಗಳಲ್ಲಿ ಉಂಟಾದವು. ಶಿವಳ್ಳಿ ಬ್ರಾಹ್ಮಣರು ತುಳು ಭಾಷಿಕರಾದುದರಿಂದ ದಕ್ಷಿಣ ಕನ್ನಡ ಪರಿಸರದಲ್ಲಿ ಪೂಜೆ ಪುಸ್ತಕಗಳು ತುಳು ಲಿಪಿಯಲ್ಲೇ ಪ್ರಚಲಿತವಿದ್ದವು.
ಹಾಗಾಗಿ ತುಳು ಭಾಷೆಗೆ ಲಿಪಿ ಇದ್ದರೂ ಆ ಲಿಪಿಯಲ್ಲಿ ಬರೆದ ಗ್ರಂಥಗಳು ಸಂಸ್ಕೃತ ಭಾಷೆಯವೇ ಆಗಿವೆ. ಹಾಗಾಗಿ ತುಳು ಲಿಪಿ ಹಾಗೂ ತುಳು ಭಾಷೆಗಳ ನಡುವೆ ಅಂತರ ಹಾಗೆ ಉಳಿಯಿತು.

Tuesday, January 6, 2009

ತುಳು ಲಿಪಿ

ತುಳು ಭಾಷೆ ಮತ್ತು ಲಿಪಿ ಬಗೆಗೆ ಬಹಳಷ್ಟು ತಪ್ಪು ಕಲ್ಪನೆಗಳಿವೆ. ತುಳು ಭಾಷೆಗೆ ಲಿಪಿ ಇಲ್ಲ ಎಂದು ನಮ್ಮ ಕನ್ನಡಿಗರು ಮಾತ್ರವಲ್ಲ, ತುಳುವರು ಕೂಡ ಭಾವಿಸಿದ್ದಾರೆ. ಹಲವು ಮಹನೀಯರು ಈ ತಪ್ಪು ಕಲ್ಪನೆ ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ.

ಈ ಬ್ಲಾಗ್ ನ ಉದ್ದೇಶ ಕೂಡ ಅದೇ.

ನನ್ನ ತಂದೆ ರಾಮಚಂದ್ರ ಭಟ್ ಈ ವಿಷಯದಲ್ಲಿ ಬಹಳ ಅಧ್ಯಯನ ಮಾಡಿದ್ದಾರೆ. ಅದನ್ನೆಲ್ಲಾ ಬಿಚ್ಚಿಡುವ ಪ್ರಯತ್ನ ನನ್ನದು.